ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಹಿಂದುಳಿದ ವರ್ಗಗಳ ಸಮುದಾಯದ ಅಭ್ಯರ್ಥಿಗಳಿಗೆ ಸಹಾಯಧನ ಸೌಲಭ್ಯ ಒದಗಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ವಂತ ಉದ್ಯೋಗ ಕೈಗೊಳ್ಳಲು ಆಸಕ್ತಿ ಹೊಂದಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಹಾರವಾಹಿನಿ (ಆಹಾರ ಕಿಯೋಸ್ಟ್) ಯೋಜನೆಯಡಿ ನಾಲ್ಕು ಚಕ್ರಗಳ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳ ಇವಿ-ಗೂಡ್ಸ್ ವಾಹನಗಳ ಖರೀದಿಗೆ ನಿಗಮದಿಂದ 3 ಲಕ್ಷರೂ. ಸಹಾಯಧನವನ್ನು ನೀಡಲಾಗುತ್ತದೆ. ಸದರಿ ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಫಲಾನುಭವಿಗಳು ಮಾ.20ರೊಳಗೆ ತಮಗೆ ಹತ್ತಿರದ ಗ್ರಾಮ್ ಒನ್/ಕರ್ನಾಟಕ ಒನ್ ಕೇಂದ್ರಗಳ ಮುಖೇನ ಅರ್ಜಿ ಸಲ್ಲಿಸಬಹುದು.
ಆಹಾರವಾಹಿನಿ (ಆಹಾರ ಕಿಯೋಸ್ಟ್) ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ಒಳಗೊಂಡ ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಹಿಂದುಳಿದ ವರ್ಗಗಳ ಸಮುದಾಯದ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ ಹಾಗೂ ವಾಹನ ಖರೀದಿಗೆ 3ಲಕ್ಷರೂ. ಗಳ ಸಹಾಯಧನವನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಉಳಿಕೆ ಮೊತ್ತವನ್ನು ಬ್ಯಾಂಕುಗಳು/ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು:
• ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ನಲ್ಲಿ ಉಳಿದ ಸಮುದಾಯಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
• ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ 3ಲಕ್ಷರೂ. ಮಿತಿಯೊಳಗಿರಬೇಕು.
ವಯೋಮಿತಿ:
ಕನಿಷ್ಠ ಮಿತಿ – 21 ವರ್ಷಗಳು ಗರಿಷ್ಠ ಮಿತಿ – 45 ವರ್ಷಗಳು
ಯೋಜನೆ ಲಭ್ಯವಿರುವ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಗಳು
ಬೆಂಗಳೂರು ನಗರ ಪ್ರದೇಶದ ವಿಧಾನ ಸಭಾ ಕ್ಷೇತ್ರಗಳಾದ ಬ್ಯಾಟರಾಯನಪುರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ, ಗಾಂಧಿನಗರ, ಕೆ.ಆರ್.ಪುರ, ಮಹದೇವಪುರ, ಪುಲಕೇಶಿನಗರ, ಸರ್ವಜ್ಞನಗರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ದಾಸರಹಳ್ಳಿ, ಬಸವನಗುಡಿ, ಪದ್ಮನಾಭನಗರ, ಬಿ.ಟಿ.ಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ, ಗೋವಿಂದರಾಜನಗರ, ವಿಜಯನಗರ, ಚಾಮರಾಜಪೇಟೆ, ಚಿಕ್ಕಪೇಟೆ, ರಾಜರಾಜೇಶ್ವರಿನಗರ, ಶಾಂತಿನಗರ, ರಾಜಾಜಿನಗರ
ಶಿವಮೊಗ್ಗ ನಗರ, ತುಮಕೂರು ನಗರ, ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಮಂಗಳೂರು ನಗರ (ದಕ್ಷಿಣ), ಬೆಳಗಾವಿ ಉತ್ತರ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಕಲಬುರಗಿ ಉತ್ತರ, ಬಳ್ಳಾರಿ ನಗರ ಕ್ಷೇತ್ರ
ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
• ಮಾನ್ಯವಾದ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ • ಅರ್ಜಿದಾರರ ಪಾಸ್ಪೋರ್ಟ್ ಅಳತೆಯ ಭಾವ ಚಿತ್ರ • ಆಧಾರ್ ಕಾರ್ಡ್ ಪ್ರತಿ • ಬ್ಯಾಂಕ್ ಪಾಸ್ ಬುಕ್ • ಡ್ರೈವಿಂಗ್ ಲೈಸೆನ್ಸ್ • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇತ್ಯಾದಿ…
ಆಯ್ಕೆ ವಿಧಾನ:
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಾನದಂಡಗಳ ಅನುಸಾರ.
ಅರ್ಜಿದಾರರ ಗಮನಕ್ಕೆ: ಅರ್ಜಿದಾರರು ಈಗಾಗಲೇ 01 ಬಾರಿ ನಿಗಮದ ಯಾವುದಾದರೂ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದಿದ್ದರೆ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ, ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ: ದೂರವಾಣಿ ಸಂಖ್ಯೆ 080-22374832 ಮೊಬೈಲ್ ಸಂಖ್ಯೆ-8050770004, 8050770005 ಅನ್ನು ಸಂಪರ್ಕಿಸಬಹುದು.